YouVersion Logo
Search Icon

ಯೆಶಾಯ 9

9
ಬರಲಿರುವ ರಾಜಾಧಿರಾಜ
1ಆದರೂ ಕಷ್ಟಸಂಕಷ್ಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆಗೌರವ ಬರುವುದು: ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆಗೌರವ ಬಂದೊದಗುವುದು.
2ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ
ಸಂಚರಿಸುತ್ತಿದ್ದ ಜನರಿಗೆ
ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ
ಬಾಳುತ್ತಿದ್ದಾ ನಾಡಿಗರಿಗೆ.
3ವೃದ್ಧಿಗೊಳಿಸಿರುವೆ ನೀನು ಆ ದೇಶವನು
ಅಧಿಕರಿಸಿರುವೆ ಅದರ ತೋಷವನು
ಸುಗ್ಗಿಕಾಲದಲಿ ಹಿಗ್ಗುವವರಂತೆ
ಕೊಳ್ಳೆ ಹಂಚಿಕೊಳ್ಳುವವರಂತೆ
ಹರ್ಷಿಸುವರವರು ನಿನ್ನ ಮುಂದೆ.
4ಮುರಿದುಹಾಕಿದೆ ಭಾರವಾದ ಅವರ ನೊಗವನು
ಅವರ ಬೆನ್ನನ್ನು ಬಡಿದ ಬೆತ್ತವನು
ದಬ್ಬಾಳಿಕೆ ನಡೆಸಿದವರ ದೊಣ್ಣೆಯನು;
ಮಿದ್ಯಾನನ್ನು ಗೆದ್ದ ದಿನದಂದು
ಹಾಗೆಯೆ ಮಾಡಿದೆಯಲ್ಲವೆ ನೀನು?
5ಅಗ್ನಿಕುಂಡಕ್ಕೆ ಆಹುತಿಯಾಗುವುವು
ಯುದ್ಧಕ್ಕೆ ಬಂದ ಯೋಧರ ಪಾದರಕ್ಷೆಗಳು
ರಕ್ತಸಿಕ್ತವಾದವರ ದೇಹದ ಕವಚಗಳು.
6ಮಗುವೊಂದು ಹುಟ್ಟಿತೆಮಗೆ
ವರಪುತ್ರನನು ಕೊಟ್ಟರೆಮಗೆ.
ಆತನ ಕೈಯಲ್ಲಿಹುದು ರಾಜ್ಯಾಡಳಿತ
‘ಅದ್ಭುತಶಾಲಿ’, ಮಂತ್ರಿಶ್ರೇಷ್ಠ’
‘ಪರಾಕ್ರಮದೇವ’, ‘ಅನಂತ ಪಿತ’,
‘ಶಾಂತಿ ನೃಪ’ - ಇವು ಆತನ ನಾಮಾಂಕಿತ.
7ಅಂತ್ಯವಿರದಾತನ ರಾಜ್ಯಾಭಿವೃದ್ಧಿಗೆ
ಕೊನೆಯಿರದಾ ರಾಜ್ಯದ ಶಾಂತಿಗೆ.
ಆಸೀನನಾಗುವನಾತ ದಾವೀದನ ಸಿಂಹಾಸನದ ಮೇಲೆ
ಅಧಿಕಾರ ನಡೆಸುವನು ಆ ಸಾಮ್ರಾಜ್ಯದ ಮೇಲೆ.
ಬಲಪಡಿಸುವನು ನ್ಯಾಯನೀತಿಯಿಂದದನು
ಇಂದಿಗೂ ಎಂದೆಂದಿಗೂ ಸ್ಥಿರಪಡಿಸುವನದನು.
ಸರ್ವಶಕ್ತಸ್ವಾಮಿಯ ಆಗ್ರಹವೆ ಸಾಧಿಸುವುದದನು.
ಇಸ್ರಯೇಲಿಗೆ ಶಾಪದ ಸಂದೇಶ
8ಯಕೋಬ ಕುಲದವರಿಗೆ‍ ಶಾಪದ ಸಂದೇಶ ಒಂದನ್ನು ಸರ್ವೇಶ್ವರ ಕಳುಹಿಸಿರುವರು. ಅದು ಇಸ್ರಯೇಲರ ಮೇಲೆ ಎರಗುವುದು. 9“ಇಟ್ಟಿಗೆಗಳು ಬಿದ್ದುಹೋಗಿವೆ. ಕೆತ್ತನೆ ಕಲ್ಲುಗಳಿಂದ ಮರಳಿ ಕಟ್ಟುವೆವು. ಕಡಿದಿರುವರು ಅತ್ತಿಮರಗಳನ್ನು, ಅಲ್ಲೇ ನೆಡುವೆವು ದೇವದಾರು ವೃಕ್ಷಗಳನ್ನು,” ಎಂದು ಗರ್ವದಿಂದ ಕೊಚ್ಚಿಕೊಳ್ಳುವ 10ಎಫ್ರಯಿಮ್ ಜನರಿಗೂ ಸಮಾರ್ಯದ ನಿವಾಸಿಗಳಿಗೂ ಅದು ಗೊತ್ತಾಗುವುದು.
11ಸ್ವಾಮಿಯು ರೆಚೀನನ ಶತ್ರುಗಳನ್ನು ಅವರ ವಿರುದ್ಧವಾಗಿ ಎತ್ತಿಕಟ್ಟಿರುವರು. ಅವರ ಮುಂದೆ ಸೀರಿಯರನ್ನು, ಅವರ ಹಿಂದೆ ಫಿಲಿಷ್ಟಿಯರನ್ನು - ಹೀಗೆ ಎಲ್ಲಾ ಶತ್ರುಗಳನ್ನು ಎಬ್ಬಿಸಿರುವರು. 12ಇವರು ಇಸ್ರಯೇಲರನ್ನು ನುಂಗಿಬಿಡಲು ಬಾಯಿ ತೆರೆದಿದ್ದಾರೆ. ಇಷ್ಟಾದರೂ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.
13ಆದರೂ ತಮ್ಮನ್ನು ಶಿಕ್ಷಿಸಿದ ದೇವರಿಗೆ ಇಸ್ರಯೇಲರು ಅಭಿಮುಖರಾಗಲಿಲ್ಲ. ಸೇನಾಧೀಶ್ವರಸ್ವಾಮಿಯನ್ನು ಅರಸಲಿಲ್ಲ. 14-15ಆದಕಾರಣ, ಇಸ್ರಯೇಲಿನ ತಲೆಬಾಲಗಳನ್ನೂ ತುದಿಬುಡವನ್ನೂ ಹುಲ್ಲಿನಂತೆ ಸ್ವಾಮಿ ಒಂದೇ ದಿನದಲ್ಲಿ ಕಡಿದುಬಿಡುವರು; ಅಂದರೆ ಸನ್ಮಾನ್ಯ ಹಿರಿಯರನ್ನು, ಸುಳ್ಳುಬೋಧನೆ ಮಾಡುವ ಪ್ರವಾದಿಗಳನ್ನು ಸಂಹರಿಸಿಬಿಡುವರು. 16ಈ ಜನರನ್ನು ನಡೆಸುವವರು ತಪ್ಪುದಾರಿಗೆ ಎಳೆಯುವಂಥವರು. ಅವರನ್ನು ಹಿಂಬಾಲಿಸುವವರೆಲ್ಲ ನಾಶವಾಗುವರು.
17ಎಂದೇ ಅವರ ಯುವಕ ಯುವತಿಯರ ಬಗ್ಗೆ ಸ್ವಾಮಿಗೆ ಸಂತೋಷವಿಲ್ಲ; ಅವರ ಅನಾಥರ ಮತ್ತು ವಿಧವೆಯರ ಬಗ್ಗೆ ಸಹಾನುಭೂತಿಯಿಲ್ಲ. ಪ್ರತಿಯೊಬ್ಬನೂ ಧರ್ಮಭ್ರಷ್ಟನೂ ಅತಿ ದುಷ್ಟನೂ ಆಗಿದ್ದಾನೆ. ಪ್ರತಿಯೊಬ್ಬನ ಬಾಯಿ ನುಡಿಯುವುದು ಕೆಡುಕನ್ನೇ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.
18ದುಷ್ಟತನ ಬೆಂಕಿಗೆ ಸಮಾನ. ಅದು ಮುಳ್ಳುಗಿಳ್ಳುಗಳನ್ನು ಸುಟ್ಟುಹಾಕುತ್ತದೆ. ಕಾಡುಪೊದೆಗಳನ್ನು ಭಸ್ಮಮಾಡುತ್ತದೆ. ಹೊಗೆಯಾಡುತ್ತಾ ಮುಗಿಲಂತೆ ಮೇಲೆ ಬೀಳುತ್ತದೆ. 19ಸೇನಾಧೀಶ್ವರಸ್ವಾಮಿಯ ಕೋಪಾಗ್ನಿಯಿಂದ ನಾಡು ಸುಟ್ಟುಹೋಗಿದೆ. ಪ್ರಜೆಗಳು ಅಗ್ನಿಗೆ ಆಹುತಿಯಾಗಿದ್ದಾರೆ. ಅಣ್ಣನಿಗೆ ತಮ್ಮನ ಮೇಲೆ ದಯೆ ಇಲ್ಲದಾಗಿದೆ. 20ಅತ್ತ ಕಿತ್ತುತಿಂದರೂ ಅವರಿಗೆ ತೃಪ್ತಿಯಿಲ್ಲ. ಇತ್ತ ಕುಡಿದು ಕಬಳಿಸಿದರೂ ಅವರ ಹಸಿವು ನೀಗುವುದಿಲ್ಲ. ಒಬ್ಬೊಬ್ಬನೂ ತನ್ನ ಕಂದನನ್ನೇ ಕೊಂದು ತಿನ್ನುತ್ತಾನೆ. 21ಮನಸ್ಸೆ ಎಫ್ರಯಿಮನ್ನು ಎಫ್ರಯಿಮ್ ಮನಸ್ಸೆಯನ್ನು ಕಬಳಿಸುತ್ತದೆ. ಇವೆರಡೂ ಸೇರಿ ಜುದೇಯಕ್ಕೆ ವಿರುದ್ಧವಾಗಿ ಎದ್ದು ನಿಂತಿವೆ. ಇಷ್ಟಾದರೂ ಸಹ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.

Currently Selected:

ಯೆಶಾಯ 9: KANCLBSI

Highlight

Share

Copy

None

Want to have your highlights saved across all your devices? Sign up or sign in