YouVersion Logo
Search Icon

ಅರಣ್ಯಕಾಂಡ 21

21
ಅರಾದ್ ಪಟ್ಟಣದ ಅರಸನನ್ನು ಜಯಿಸಿದ್ದು
1ನೆಗೆವನಲ್ಲಿ ವಾಸಿಸುವ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು, ಇಸ್ರಾಯೇಲರು ಅತಾರೀಮ್ ಮಾರ್ಗವಾಗಿ ಬರುತ್ತಿದ್ದಾರೆಂದು ಕೇಳಿ, ಅವರ ಸಂಗಡ ಯುದ್ಧಮಾಡಿ, ಅವರಲ್ಲಿ ಕೆಲವರನ್ನು ಸೆರೆಹಿಡಿದನು. 2ಆಗ ಇಸ್ರಾಯೇಲರು ಯೆಹೋವ ದೇವರಿಗೆ ಪ್ರಮಾಣಮಾಡಿ, “ನೀನು ಈ ಜನರನ್ನು ನಮ್ಮ ಕೈಯಲ್ಲಿ ನಿಜವಾಗಿ ಒಪ್ಪಿಸಿಕೊಟ್ಟರೆ, ನಾವು ಅವರ ಪಟ್ಟಣಗಳನ್ನು ಸಂಪೂರ್ಣವಾಗಿ ನಾಶಮಾಡುವೆವು,” ಎಂದರು. 3ಆಗ ಯೆಹೋವ ದೇವರು ಇಸ್ರಾಯೇಲರ ಧ್ವನಿಯನ್ನು ಕೇಳಿ ಕಾನಾನ್ಯರನ್ನು ಒಪ್ಪಿಸಿಕೊಟ್ಟನು. ಇಸ್ರಾಯೇಲರು ಅವರನ್ನೂ ಅವರ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದರು. ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
ಕಂಚಿನ ಸರ್ಪ
4ಅವರು ಹೋರ್ ಎಂಬ ಬೆಟ್ಟದಿಂದ ಹೊರಟು, ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಆದರೆ ಜನರು ಈ ಪ್ರಯಾಣದಿಂದ ಆಯಾಸವಾಗಿ ಬಹಳ ಕುಂದಿಹೋದರು. 5ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ, “ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಈಜಿಪ್ಟ್ ದೇಶದಿಂದ ಏಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ. ನಾವು ಈ ನಿಸ್ಸಾರವಾದ ರೊಟ್ಟಿಯನ್ನು ತಿಂದು ನಮಗೆ ಬೇಸರವಾಗಿದೆ,” ಎಂದರು.
6ಆಗ ಯೆಹೋವ ದೇವರು ಜನರೊಳಗೆ ವಿಷಸರ್ಪಗಳನ್ನು ಕಳುಹಿಸಿದರು. ಅವು ಜನರನ್ನು ಕಚ್ಚಿದ್ದರಿಂದ, ಇಸ್ರಾಯೇಲರಲ್ಲಿ ಬಹುಜನರು ಸತ್ತುಹೋದರು. 7ಆದ್ದರಿಂದ ಜನರು ಮೋಶೆಯ ಬಳಿಗೆ ಬಂದು, “ನಾವು ಯೆಹೋವ ದೇವರಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ. ಯೆಹೋವ ದೇವರು ನಮ್ಮ ಮೇಲಿಂದ ಸರ್ಪಗಳನ್ನು ದೂರಮಾಡುವ ಹಾಗೆ ಪ್ರಾರ್ಥನೆ ಮಾಡು,” ಎಂದರು. ಆಗ ಮೋಶೆಯು ಜನರಿಗೋಸ್ಕರ ಪ್ರಾರ್ಥನೆಮಾಡಿದನು.
8ಯೆಹೋವ ದೇವರು ಮೋಶೆಗೆ, “ನೀನು ಕಂಚಿನಿಂದ ಒಂದು ಸರ್ಪವನ್ನು ಮಾಡಿಸಿಕೊಂಡು, ಒಂದು ಕಂಬದ ಮೇಲೆ ಇಡು. ಆಗ ಕಚ್ಚಿಸಿಕೊಂಡವರೆಲ್ಲರೂ ಅದರ ಮೇಲೆ ದೃಷ್ಟಿ ಇಟ್ಟರೆ ಅವರು ಬದುಕುವರು,” ಎಂದರು. 9ಆಗ ಮೋಶೆಯು ಕಂಚಿನ ಸರ್ಪವನ್ನು ಮಾಡಿ ಕಂಬದ ಮೇಲೆ ಇಟ್ಟನು. ಸರ್ಪದಿಂದ ಕಚ್ಚಿಸಿಕೊಂಡವರಲ್ಲಿ ಯಾರು ಆ ಕಂಚಿನ ಸರ್ಪದ ಕಡೆಗೆ ದೃಷ್ಟಿ ಇಟ್ಟು ನೋಡಿದರೋ, ಅವರು ಬದುಕಿಕೊಂಡರು.
ಮೋವಾಬಿಗೆ ಪ್ರಯಾಣ
10ಇಸ್ರಾಯೇಲರು ಹೊರಟು ಓಬೋತಿನಲ್ಲಿ ಇಳಿದುಕೊಂಡರು. 11ಓಬೋತಿನಿಂದ ಹೊರಟು ಮೋವಾಬ್ ದೇಶಕ್ಕೆದುರಾಗಿ ಸೂರ್ಯೋದಯದ ಕಡೆಯಲ್ಲಿರುವ ಮರುಭೂಮಿಯಲ್ಲಿ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು. 12ಅಲ್ಲಿಂದ ಅವರು ಹೊರಟು ಜೆರೆದ್ ಎಂಬ ಹಳ್ಳದ ಬಳಿಯಲ್ಲಿ ಇಳಿದುಕೊಂಡರು. 13ಅಲ್ಲಿಂದ ಹೊರಟು ಅಮೋರಿಯರ ಪ್ರದೇಶದಿಂದ ಹೊರಗೆ ಬರುವ ಮರುಭೂಮಿಯಲ್ಲಿರುವ ಅರ್ನೋನ್ ಹೊಳೆಯ ಈಚೆಯಲ್ಲಿ ಇಳಿದುಕೊಂಡರು. ಏಕೆಂದರೆ ಅರ್ನೋನ್ ಮೋವಾಬರಿಗೂ ಅಮೋರಿಯರಿಗೂ ಮಧ್ಯದ ಮೋವಾಬಿನ ಗಡಿಯಾಗಿದೆ. 14ಆದಕಾರಣ ಯೆಹೋವ ದೇವರ ಯುದ್ಧಗಳ ಪುಸ್ತಕದಲ್ಲಿ ಹೀಗೆಂದು ಬರೆದಿದೆ:
“ಸೂಫಕ್ಕೆ ಸೇರಿದ ವಾಹೇಬನ್ನು,
ಅರ್ನೋನ್ 15ಹೊಳೆಗೆ ಸೇರುವ ಹಳ್ಳಗಳನ್ನು,
ಆರ್ ಪಟ್ಟಣದ ತನಕ
ಮೋವಾಬಿನ ಎಲ್ಲೆಯಾಗಿರುವ ಕೊರಕಲನ್ನು.”
16ಅವರು ಅಲ್ಲಿಂದ ಬೇರ್ ಎಂಬಲ್ಲಿಗೆ ಬಂದರು. ಯೆಹೋವ ದೇವರು ಮೋಶೆಗೆ, “ಜನರನ್ನು ಸೇರಿಸು. ನಾನು ಅವರಿಗೆ ನೀರನ್ನು ಕೊಡುವೆನು,” ಎಂದು ಯೆಹೋವ ದೇವರು ಮೋಶೆಗೆ ಹೇಳಿದ ಮಾತು ಇಲ್ಲಿನ ಬಾವಿಯನ್ನು ಕುರಿತೇ.
17ಆಗ ಇಸ್ರಾಯೇಲರು ಈ ಹಾಡನ್ನು ಹಾಡಿದರು:
“ಬಾವಿಯೇ, ಉಕ್ಕು,
ಜನರೇ, ಅದರ ಬಗ್ಗೆ ನೀವು ಹಾಡಿರಿ.
18ಪ್ರಭುಗಳು ಈ ಬಾವಿಯನ್ನು ಅಗೆದರು.
ಜನರ ಅಧಿಪತಿಗಳು ನ್ಯಾಯಾಧಿಪತಿಯ
ಸಲಹೆಯ ಮೇರೆಗೆ ತಮ್ಮ ಕೋಲುಗಳಿಂದ ಅದನ್ನು ತೋಡಿದರು.”
ಆಮೇಲೆ ಅವರು ಮರುಭೂಮಿಯಿಂದ ಮತ್ತಾನಕ್ಕೆ ಬಂದರು. 19ಇದಲ್ಲದೆ ಅವರು ಮತ್ತಾನದಿಂದ ನಹಲಿಯೇಲಕ್ಕೆ ಬಂದರು. ನಹಲಿಯೇಲದಿಂದ ಬಾಮೋತಿಗೆ ಬಂದರು. 20ಬಾಮೋತಿನಿಂದ ಮೋವಾಬ್ ದೇಶದಲ್ಲಿರುವ ಕಣಿವೆಯಿಂದ ಪಿಸ್ಗಾ ಎಂಬ ಬೆಟ್ಟದ ತುದಿಗೆ ಬಂದರು. ಆ ಬೆಟ್ಟದ ಮೇಲಿನಿಂದ ಕೆಳಗಿರುವ ಮರಳುಗಾಡು ಕಾಣಿಸುತ್ತದೆ.
ಸೀಹೋನ್ ಮತ್ತು ಓಗನ ಸೋಲು
21ಆಗ ಇಸ್ರಾಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ,
22“ನಾವು ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಯಾವುದೇ ಹೊಲಗಳಲ್ಲಿಯಾಗಲಿ, ದ್ರಾಕ್ಷಿತೋಟಗಳಲ್ಲಿಯಾಗಲಿ ಹೋಗುವುದಿಲ್ಲ, ಬಾವಿಯ ನೀರನ್ನು ಕುಡಿಯದೆ, ನಿನ್ನ ದೇಶವನ್ನು ದಾಟುವವರೆಗೆ ರಾಜಮಾರ್ಗದಲ್ಲಿಯೇ ಹೋಗುತ್ತೇವೆ,” ಎಂದು ಬೇಡಿಕೊಂಡರು.
23ಆದರೆ ಸೀಹೋನನು ಇಸ್ರಾಯೇಲರನ್ನು ತನ್ನ ಮೇರೆಯಲ್ಲಿ ದಾಟಗೊಡಿಸದೆ, ತನ್ನ ಜನರೆಲ್ಲರನ್ನೂ ಕೂಡಿಸಿಕೊಂಡು, ಇಸ್ರಾಯೇಲರನ್ನು ಎದುರಿಸಲು ಮರುಭೂಮಿಗೆ ಹೊರಟನು. ಅವನು ಯಹಚಕ್ಕೆ ಬಂದು ಇಸ್ರಾಯೇಲರ ಸಂಗಡ ಯುದ್ಧಮಾಡಿದನು. 24ಆದರೆ ಇಸ್ರಾಯೇಲರು ಅವನನ್ನು ಖಡ್ಗದಿಂದ ಹೊಡೆದು, ಅವನ ದೇಶವನ್ನು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯವರೆಗೆ ಅಮ್ಮೋನನ ಮಕ್ಕಳ ಮೇರೆಯವರೆಗೂ ಸ್ವಾಧೀನಪಡಿಸಿಕೊಂಡರು. ಏಕೆಂದರೆ ಅಮ್ಮೋನನ ಮಕ್ಕಳ ಮೇರೆಯು ಬಲಿಷ್ಠವಾಗಿತ್ತು. 25ಇಸ್ರಾಯೇಲರು ಆ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಇಸ್ರಾಯೇಲರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು. 26ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ಪಟ್ಟಣವಾಗಿತ್ತು. ಅವನು ಮೋವಾಬ್ ದೇಶದ ಹಿಂದಿನ ಅರಸನ ಸಂಗಡ ಯುದ್ಧಮಾಡಿ, ಅವನ ಸಮಸ್ತ ದೇಶವನ್ನು ಅರ್ನೋನ್ ನದಿಯವರೆಗೂ ಅವನಿಂದ ವಶಪಡಿಸಿಕೊಂಡಿದ್ದನು.
27ಇದರ ಬಗ್ಗೆ ಕವಿಗಳು ಹೀಗೆಂದು ಹಾಡಿದ್ದಾರೆ:
“ಹೆಷ್ಬೋನಿಗೆ ಬನ್ನಿರಿ ಅದನ್ನು ತಿರುಗಿ ಕಟ್ಟಬೇಕು.
ಸೀಹೋನನ ಪಟ್ಟಣವನ್ನು ಪುನಃಸ್ಥಾಪನೆ ಮಾಡಬೇಕು.
28“ಏಕೆಂದರೆ ಬೆಂಕಿ ಹೆಷ್ಬೋನಿನಿಂದಲೂ,
ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು,
ಮೋವಾಬಿನ ಆರ್ ಎಂಬ ಪಟ್ಟಣವನ್ನೂ,
ಅರ್ನೋನ್ ಹೊಳೆಯ ಬಳಿಯಲ್ಲಿರುವ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು.
29ಮೋವಾಬೇ, ನಿನಗೆ ದಿಕ್ಕಾರ!
ಕೆಮೋಷಿನ ಜನವೇ ನಿಮಗೆ ದುರ್ಗತಿ ಉಂಟಾಯಿತಲ್ಲಾ!
ಅವನು ತನ್ನ ಪುತ್ರರನ್ನು ದೇಶಭ್ರಷ್ಟರನ್ನಾಗಿಯೂ
ತನ್ನ ಪುತ್ರಿಯರನ್ನು ಸೆರೆಯವರನ್ನಾಗಿಯೂ
ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಒಪ್ಪಿಸಿಕೊಟ್ಟನು.
30“ನಾವು ಅವರನ್ನು ಪದಚ್ಚುತಿಗೊಳಿಸಿದೆವು.
ಹೆಷ್ಬೋನು ದೀಬೋನಿನವರೆಗೂ ನಾಶವಾಯಿತು.
ನಾವು ಅವರನ್ನು ಮೇದೆಬಾಕ್ಕೆ ಮುಟ್ಟುವ
ನೋಫಹದ ತನಕ ಹಾಳುಮಾಡಿದೆವು.”
31ಹೀಗೆ ಇಸ್ರಾಯೇಲರು ಅಮೋರಿಯರ ದೇಶದಲ್ಲಿ ವಾಸಮಾಡಿದರು.
32ಇದಲ್ಲದೆ ಮೋಶೆಯು ಯಜ್ಜೇರನ್ನು ಸಂಚರಿಸಿ ನೋಡುವುದಕ್ಕೆ ಗೂಢಚಾರರನ್ನು ಕಳುಹಿಸಿದನು. ಅವರು ಅವರ ಗ್ರಾಮಗಳನ್ನು ವಶಪಡಿಸಿಕೊಂಡು, ಅಲ್ಲಿರುವ ಅಮೋರಿಯರನ್ನು ಹೊರಡಿಸಿಬಿಟ್ಟರು. 33ಅವರು ತಿರುಗಿ ಬಾಷಾನಿನ ಹಾದಿ ಏರಿದರು. ಬಾಷಾನಿನ ಅರಸನಾದ ಓಗನು ಎದ್ರೈಯಲ್ಲಿ ಯುದ್ಧಮಾಡುವುದಕ್ಕೆ ತನ್ನ ಸಮಸ್ತ ಜನರ ಸಂಗಡ ಅವರಿಗೆದುರಾಗಿ ಹೊರಟನು.
34ಆಗ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಅವನಿಗೆ ಭಯಪಡಬೇಡ, ಏಕೆಂದರೆ ನಿನ್ನ ಕೈಯೊಳಗೆ ನಾನು ಅವನನ್ನೂ ಅವನ ಸಮಸ್ತ ಜನರನ್ನೂ ಅವನ ದೇಶವನ್ನೂ ಕೊಟ್ಟಿದ್ದೇನೆ. ನೀನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಇವನಿಗೂ ಮಾಡಬೇಕು,” ಎಂದರು.
35ಈ ಪ್ರಕಾರ ಅವರು ಅವನನ್ನೂ ಅವನ ಮಕ್ಕಳನ್ನೂ ಅವನ ಸಮಸ್ತ ಜನರನ್ನೂ ಅವನಿಗೆ ಒಬ್ಬನಾದರೂ ಉಳಿಯದಂತೆ ಹೊಡೆದು, ಅವನ ದೇಶವನ್ನು ವಶಮಾಡಿಕೊಂಡರು.

Highlight

Share

Copy

None

Want to have your highlights saved across all your devices? Sign up or sign in

Video for ಅರಣ್ಯಕಾಂಡ 21