ಅರಣ್ಯಕಾಂಡ 15
15
ವಿವಿಧ ಸಮರ್ಪಣೆಗಳು
1ಯೆಹೋವ ದೇವರು ಮೋಶೆಗೆ, 2“ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ, ‘ನಾನು ನಿಮಗೆ ಕೊಡುವ ನಿಮ್ಮ ನಿವಾಸಗಳ ದೇಶಕ್ಕೆ ಬಂದಾಗ, 3ಯೆಹೋವ ದೇವರಿಗೆ ಪಶುಗಳಿಂದಾದರೂ ಕುರಿಗಳಿಂದಾದರೂ ಸುವಾಸನೆಯನ್ನುಂಟುಮಾಡುವ ದಹನಬಲಿಯಾಗಲಿ, ಹರಕೆಯನ್ನು ಈಡೇರಿಸುವ ಬಲಿಯನ್ನಾಗಲಿ, ಉಚಿತವಾದ ಸಮರ್ಪಣೆಯಾಗಲಿ, ನಿಮ್ಮ ಪವಿತ್ರ ಹಬ್ಬಗಳಲ್ಲಿಯಾಗಲಿ ಯೆಹೋವ ದೇವರಿಗೆ ಬೆಂಕಿಯಿಂದ ಅರ್ಪಿಸಲಾಗಲಿ. 4ಅದರೊಂದಿಗೆ ಯೆಹೋವ ದೇವರಿಗೆ ತನ್ನ ಬಲಿಯನ್ನು ಅರ್ಪಿಸುವಾಗ ಧಾನ್ಯ ಅರ್ಪಣೆಗಾಗಿ ಸುಮಾರು ಒಂದುವರೆ ಕಿಲೋಗ್ರಾಂ#15:4 ಹೀಬ್ರೂ ಭಾಷೆಯಲ್ಲಿ ಎಫಾದ ಹತ್ತನೇ ಒಂದು ಭಾಗ, ಅಂದರೆ ಸುಮಾರು 1.6 ಕಿಲೋಗ್ರಾಂ ಗೋಧಿ ಹಿಟ್ಟನ್ನು ಒಂದು ಲೀಟರ್#15:4 ಹೀಬ್ರೂ ಭಾಷೆಯಲ್ಲಿ ಹಿನ್ನ ಕಾಲುಭಾಗ, ಅಂದರೆ ಸುಮಾರು 1 ಲೀಟರ್ ಓಲಿವ್ ಎಣ್ಣೆಗೆ ಬೆರೆಸಲಾಗುತ್ತದೆ. 5ಪಾನದ ಅರ್ಪಣೆಗಾಗಿ ದಹನಬಲಿಯ ಸಂಗಡ ಒಂದು ಕುರಿಗೋಸ್ಕರ ಒಂದು ಲೀಟರ್ ದ್ರಾಕ್ಷಾರಸವನ್ನು ಅರ್ಪಿಸಬೇಕು.
6“ ‘ಟಗರನ್ನು ಅರ್ಪಿಸುವಾಗ ಅದರೊಂದಿಗೆ ಧಾನ್ಯ ಅರ್ಪಣೆಗಾಗಿ ಸುಮಾರು ಒಂದೂವರೆ ಲೀಟರ್#15:6 ಹೀಬ್ರೂ ಭಾಷೆಯಲ್ಲಿ ಹಿನ್ನ ಮೂರನೇ ಒಂದು ಭಾಗ, ಅಂದರೆ ಸುಮಾರು 1.3 ಲೀಟರ್ ಓಲಿವ್ ಎಣ್ಣೆ ಬೆರೆಸಿದ ಮೂರು ಕಿಲೋಗ್ರಾಂ#15:6 ಹೀಬ್ರೂ ಭಾಷೆಯಲ್ಲಿ ಎಫಾದ ಹತ್ತನೇ ಎರಡು ಭಾಗ, ಅಂದರೆ ಸುಮಾರು 3 ಕಿಲೋಗ್ರಾಂ ನಯವಾದ ಹಿಟ್ಟನ್ನು ನೀನು ಸಿದ್ಧಮಾಡಬೇಕು. 7ಪಾನದ ಸಮರ್ಪಣೆಯಾಗಿ ಯೆಹೋವ ದೇವರಿಗೆ ಸುವಾಸನೆಗಾಗಿ ಒಂದು ಲೀಟರ್ ದ್ರಾಕ್ಷಾರಸವನ್ನು ಅರ್ಪಿಸಬೇಕು.
8“ ‘ನೀನು ಯೆಹೋವ ದೇವರಿಗೆ ದಹನಬಲಿಗಾಗಿ ಇಲ್ಲವೆ ಪ್ರಮಾಣವನ್ನು ಈಡೇರಿಸುವ ಬಲಿಗಾಗಿ ಇಲ್ಲವೆ ಸಮಾಧಾನದ ಬಲಿಗಳಿಗಾಗಿ ಹೋರಿಯನ್ನು ನೀನು ಸಿದ್ಧಮಾಡುವಾಗ, 9ನೀವು ಆ ಹೋರಿಯೊಂದಿಗೆ ಧಾನ್ಯ ಸಮರ್ಪಣೆಯಾಗಿ ಸುಮಾರು ಎರಡು ಲೀಟರ್#15:9 ಹೀಬ್ರೂ ಭಾಷೆಯಲ್ಲಿ ಅರ್ಧ ಹಿನ್, ಅಂದರೆ ಸುಮಾರು 1.9 ಲೀಟರ್ ಓಲಿವ್ ಎಣ್ಣೆ ಬೆರೆಸಿದ ಐದು ಕಿಲೋಗ್ರಾಂ#15:9 ಹೀಬ್ರೂ ಭಾಷೆಯಲ್ಲಿ ಎಫಾದ ಹತ್ತನೇ ಮೂರು ಭಾಗ, ಅಂದರೆ ಸುಮಾರು 5 ಕಿಲೋಗ್ರಾಂ ಗೋಧಿ ಹಿಟ್ಟನ್ನು ಅರ್ಪಿಸಬೇಕು. 10ಇದಲ್ಲದೆ, ಪಾನದ್ರವ್ಯಕ್ಕಾಗಿ ಒಂದುವರೆ ಲೀಟರ್ ದ್ರಾಕ್ಷಾರಸವನ್ನು ಸಮರ್ಪಿಸಬೇಕು. ಇದು ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಯಾಗುವುದು. 11ಹೀಗೆ ಒಂದು ಹೋರಿ, ಟಗರು, ಕುರಿಮರಿ, ಮೇಕೆ, ಇವುಗಳಲ್ಲಿ ಪ್ರತಿಯೊಂದು ಬಲಿಪ್ರಾಣಿಯ ಸಂಗಡ ಈ ಪ್ರಕಾರ ಮಾಡತಕ್ಕದ್ದು. 12ನೀವು ಸಿದ್ಧಪಡಿಸಿದ ಬಲಿಗಳ ಲೆಕ್ಕದ ಪ್ರಕಾರ ನೀವು ಒಂದೊಂದನ್ನು ಅದರ ಲೆಕ್ಕದ ಪ್ರಕಾರ ಮಾಡತಕ್ಕದ್ದು.
13“ ‘ಯೆಹೋವ ದೇವರಿಗೆ ಸುಗಂಧದ ದಹನಬಲಿಯನ್ನು ಅರ್ಪಿಸುವಾಗ ಸ್ಥಳೀಯ ಮೂಲದ ಇಸ್ರಾಯೇಲರೆಲ್ಲರೂ ಇವುಗಳನ್ನು ಈ ರೀತಿಯಾಗಿಯೇ ಮಾಡಬೇಕು. 14ನಿಮ್ಮ ಸಂಗಡ ಪ್ರಯಾಣ ಮಾಡುವ ಪರದೇಶಿಯಾಗಲಿ ಇಲ್ಲವೆ ನಿಮ್ಮ ಮುಂದಿನ ಸಂತತಿಯವರ ಸಂಗಡ ಇರುವವನಾಗಲಿ, ಯೆಹೋವ ದೇವರಿಗೆ ಸುಗಂಧದ ದಹನಬಲಿಯನ್ನು ಸಮರ್ಪಿಸಿದಾಗ, ನೀವು ಹೇಗೆ ಮಾಡುತ್ತೀರೋ ಹಾಗೆಯೇ ಅವನು ಮಾಡಲಿ. 15ನಿಮಗೂ ನಿಮ್ಮ ಕೂಡ ಪ್ರಯಾಣ ಮಾಡುವ ಪರಕೀಯನಿಗೂ ಒಂದೇ ಕಟ್ಟಳೆ ಇರಬೇಕು. ಯೆಹೋವ ದೇವರ ಎದುರಿನಲ್ಲಿ ನೀವು ಇರುವ ಪ್ರಕಾರ ಪರಕೀಯನೂ ಇರಬೇಕು. 16ನಿಮಗೂ, ನಿಮ್ಮ ಕೂಡ ಪ್ರಯಾಣ ಮಾಡುವ ಪರಕೀಯನಿಗೂ ಒಂದೇ ಪ್ರಮಾಣವೂ ಒಂದೇ ನ್ಯಾಯವೂ ಇರಬೇಕು,’ ” ಎಂದರು.
17ಯೆಹೋವ ದೇವರು ಮೋಶೆಗೆ, 18“ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ: ‘ನಾನು ನಿಮ್ಮನ್ನು ಕರೆದುಕೊಂಡುಹೋಗುವ ದೇಶಕ್ಕೆ ನೀವು ಸೇರಿದನಂತರ, 19ಆ ದೇಶದ ಆಹಾರವನ್ನು ತಿನ್ನುವಾಗ, ನೀವು ಅದರಲ್ಲಿ ಸ್ವಲ್ಪವನ್ನು ಯೆಹೋವ ದೇವರಿಗೆ ಕಾಣಿಕೆಯಾಗಿ ಅರ್ಪಿಸಬೇಕು. 20ನೀವು ಕಣದಲ್ಲಿರುವ ಗೋಧಿಯಲ್ಲಿ ಪ್ರಥಮ ಫಲವನ್ನು ಕಾಣಿಕೆಯಾಗಿ ಅರ್ಪಿಸುವಂತೆ ಕಣಕದಿಂದ ಮಾಡುವ ನಿಮ್ಮ ಪ್ರಥಮ ಬೀಸಿದ ಹಿಟ್ಟಿನ ರೊಟ್ಟಿಯನ್ನು ಸಮರ್ಪಿಸಬೇಕು. 21ನೀವು ಮತ್ತು ನಿಮ್ಮ ಸಂತತಿಯವರು ನಿಮ್ಮ ಕಣದಿಂದ ಮಾಡಿದ ಪ್ರಥಮ ರೊಟ್ಟಿಯನ್ನು ಯೆಹೋವ ದೇವರಿಗೆ ಸಮರ್ಪಿಸಬೇಕು.
ತಿಳಿಯದೆ ಮಾಡಿದ ಪಾಪಕ್ಕಾಗಿ ಸಮರ್ಪಣೆಗಳು
22“ ‘ನೀವು ತಪ್ಪಿ ಯೆಹೋವ ದೇವರು ಮೋಶೆಗೆ ಹೇಳಿದ ಈ ಸಕಲ ಆಜ್ಞೆಗಳ ಪ್ರಕಾರ ಮಾಡದಿದ್ದರೆ, 23ನಿಮಗೆ ಆಜ್ಞೆಗಳನ್ನು ಕೊಟ್ಟ ದಿವಸ ಮೊದಲುಗೊಂಡು, ನಿಮ್ಮ ಸಂತತಿಗಳವರೆಗೂ ಯೆಹೋವ ದೇವರು ಮೋಶೆಯ ಕೈಯಿಂದ ನಿಮಗೆ ಆಜ್ಞಾಪಿಸಿದ ಪ್ರಕಾರ ನೀವು ಮಾಡದೆ ಹೋದರೆ, 24ಅದು ಸಭೆಗೆ ತಿಳಿಯದೆ ತಪ್ಪು ಆಗಿರುವ ಪಕ್ಷದಲ್ಲಿ, ಸಭೆಯು ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಗಾಗಿ ಒಂದು ಎಳೆಯ ಹೋರಿಯನ್ನು ಕ್ರಮದ ಪ್ರಕಾರ ಅದರ ಧಾನ್ಯ ಸಮರ್ಪಣೆಯನ್ನೂ, ಪಾನದ ಸಮರ್ಪಣೆಯನ್ನೂ, ಪಾಪ ಪರಿಹಾರಕ ಬಲಿಯಾಗಿ ಮೇಕೆಗಳಿಂದ ಒಂದು ಹೋತವನ್ನೂ ಅರ್ಪಿಸಬೇಕು. 25ಯಾಜಕನು ಇಸ್ರಾಯೇಲರ ಸಮಸ್ತ ಸಭೆಗೋಸ್ಕರ ಅವರಿಗೆ ಕ್ಷಮೆಯಾಗುವ ಹಾಗೆ ಪ್ರಾಯಶ್ಚಿತ್ತ ಮಾಡಬೇಕು. ಏಕೆಂದರೆ ಅದು ತಿಳಿಯದೆ ಮಾಡಲಾಗಿತ್ತು. ಆದರೂ ಅವರು ಯೆಹೋವ ದೇವರಿಗೆ ದಹನಬಲಿಯಾಗಿ ತಮ್ಮ ಸಮರ್ಪಣೆಯನ್ನೂ, ತಮ್ಮ ತಪ್ಪಿಗೋಸ್ಕರ ಪಾಪ ಪರಿಹಾರಕ ಬಲಿಯನ್ನೂ ಯೆಹೋವ ದೇವರ ಮುಂದೆ ತರಬೇಕು. 26ಆಗ ಇಸ್ರಾಯೇಲರ ಸಮಸ್ತ ಸಮೂಹದವರಿಗೂ, ಅವರೊಳಗೆ ಪರಕೀಯನಾಗಿ ಪ್ರವಾಸಿಯಾಗಿರುವವನಿಗೂ ಅದು ಕ್ಷಮಾಪಣೆಯಾಗುವುದು. ಏಕೆಂದರೆ ಎಲ್ಲರೂ ತಿಳುವಳಿಕೆ ಇಲ್ಲದವರಾಗಿದ್ದರು.
27“ ‘ಯಾವನಾದರೂ ಒಬ್ಬನು ತಿಳಿಯದೆ ಪಾಪ ಮಾಡುವುದಾದರೆ, ಪಾಪ ಪರಿಹಾರಕ ಬಲಿಗಾಗಿ ಒಂದು ವರ್ಷದ ಮೇಕೆಯನ್ನು ತರಬೇಕು. 28ತಿಳಿಯದೆ ಪಾಪ ಮಾಡಿದವನಿಗೋಸ್ಕರ ಯಾಜಕನು ಯೆಹೋವ ದೇವರ ಮುಂದೆ ಪ್ರಾಯಶ್ಚಿತ್ತ ಮಾಡಬೇಕು. ಅದು ಪಾಪಕ್ಷಮಾಪಣೆಯಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು. 29ಸ್ಥಳೀಯ ಮೂಲದ ಇಸ್ರಾಯೇಲರಿಗೂ ಅವರಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ತಿಳಿಯದೆ ಪಾಪಮಾಡಿದವನಿಗೂ ಒಂದೇ ನಿಯಮ ಇರಬೇಕು.
30“ ‘ಯಾವನಾದರೂ ಅಂದರೆ ದೇಶದಲ್ಲಿ ಹುಟ್ಟಿದವನಾಗಲಿ, ಪರಕೀಯನಾಗಲಿ ಬೇಕೆಂದು ಪಾಪಮಾಡಿದರೆ, ಅವನು ಯೆಹೋವ ದೇವರನ್ನು ನಿಂದಿಸಿದ್ದಾನೆ. ಆ ಮನುಷ್ಯನನ್ನು ಸ್ವಜನರಿಂದ ತೆಗೆದುಹಾಕಬೇಕು. 31ಅವನು ಯೆಹೋವ ದೇವರ ವಾಕ್ಯವನ್ನು ಅವಮಾನ ಮಾಡಿ, ಅವರ ಆಜ್ಞೆಗಳನ್ನು ಮೀರಿದ್ದರಿಂದ, ಆ ಮನುಷ್ಯನನ್ನು ನಿಶ್ಚಯವಾಗಿ ತೆಗೆದುಹಾಕಬೇಕು. ಅವನ ಅಕ್ರಮವು ಅವನ ಮೇಲೆ ಇರುವುದು,’ ” ಎಂದರು.
ವಿಶ್ರಾಂತಿಯ ದಿನವನ್ನು ಮುರಿದವನಿಗೆ ಮರಣಶಿಕ್ಷೆ
32ಇಸ್ರಾಯೇಲರು ಮರುಭೂಮಿಯಲ್ಲಿದ್ದಾಗ, ಅವರು ಸಬ್ಬತ್#15:32 ಸಬ್ಬತ್ ಅಂದರೆ ವಿಶ್ರಾಂತಿ ದಿನ ದಿನದಲ್ಲಿ ಸೌದೆಯನ್ನು ಕೂಡಿಸುವ ಒಬ್ಬನನ್ನು ಕಂಡರು. 33ಆಗ ಸೌದೆ ಕೂಡಿಸುವುದನ್ನು ಕಂಡುಕೊಂಡವರು ಅವನನ್ನು ಮೋಶೆ ಆರೋನರ ಬಳಿಗೆ ಮತ್ತು ಸಮಸ್ತ ಸಮುದಾಯದ ಬಳಿಗೆ ತಂದು, 34ಅವನಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯದ ಕಾರಣ, ಅವನನ್ನು ಕಾವಲಲ್ಲಿ ಇಟ್ಟರು. 35ಆಗ ಯೆಹೋವ ದೇವರು ಮೋಶೆಗೆ, “ಆ ಮನುಷ್ಯನು ಖಂಡಿತವಾಗಿಯೂ ಸಾಯಲೇಬೇಕು, ಸಭೆಯೆಲ್ಲಾ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆದು ಕೊಲ್ಲಬೇಕು,” ಎಂದರು. 36ಆಗ ಸಮೂಹದವರೆಲ್ಲಾ ಅವನನ್ನು ಪಾಳೆಯದ ಹೊರಗೆ ತೆಗೆದುಕೊಂಡುಹೋಗಿ, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಅವನನ್ನು ಕಲ್ಲೆಸೆದು ಕೊಂದರು.
ಬಟ್ಟೆಗಳ ಗೊಂಡೆಗಳು
37ಯೆಹೋವ ದೇವರು ಮೋಶೆಗೆ, 38“ನೀನು ಇಸ್ರಾಯೇಲರಿಗೆ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ಅವರು ತಮ್ಮ ತಲತಲಾಂತರಗಳಲ್ಲಿ ತಮ್ಮ ವಸ್ತ್ರಗಳ ಸೆರಗುಗಳ ಅಂಚಿನಲ್ಲಿ ಗೊಂಡೆಗಳನ್ನು ಮಾಡಿಕೊಳ್ಳಬೇಕು. ಸೆರಗಿನ ಗೊಂಡೆಗಳ ಮೇಲೆ ನೀಲಿ ದಾರವನ್ನು ಹಾಕಬೇಕು. 39ಅದನ್ನು ನೀವು ಗೊಂಡೆಯಾಗಿ ಇಟ್ಟುಕೊಂಡು, ಅದನ್ನು ನೋಡುವಾಗ, ಯೆಹೋವ ದೇವರ ಸಕಲ ಆಜ್ಞೆಗಳನ್ನು ನೆನಸಿ ಅವುಗಳ ಪ್ರಕಾರಮಾಡಿ, ನಿಮ್ಮ ಹೃದಯ ಹಾಗೂ ಇಚ್ಛೆಗನುಸಾರ ನಿಮ್ಮ ಕಣ್ಣುಗಳು ಜಾರತ್ವ ಮಾಡುವಂತೆ ಹಿಂಬಾಲಿಸದೆ ಇರುವಿರಿ. 40ನೀವು ನನ್ನ ಆಜ್ಞೆಗಳನ್ನೆಲ್ಲಾ ನೆನಸಿ, ಅವುಗಳ ಪ್ರಕಾರಮಾಡಿ, ನಿಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕು. 41ನಾನು ನಿಮ್ಮ ದೇವರಾಗುವದಕ್ಕೆ ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”
Currently Selected:
ಅರಣ್ಯಕಾಂಡ 15: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.