ಆದಿಕಾಂಡ 41
41
ಫರೋಹನ ಕನಸುಗಳು
1ಎರಡು ಪೂರ್ಣ ವರ್ಷಗಳು ಕಳೆದ ಮೇಲೆ ಫರೋಹನು ಒಂದು ಕನಸನ್ನು ಕಂಡನು. ಆ ಕನಸಿನಲ್ಲಿ ಅವನು ನೈಲ್ ನದಿಯ ಬಳಿಯಲ್ಲಿ ನಿಂತಿದ್ದನು. 2ಲಕ್ಷಣವಾದ ಮತ್ತು ಕೊಬ್ಬಿದ ಏಳು ಹಸುಗಳು ನೈಲ್ ನದಿಯೊಳಗಿಂದ ಏರಿಬಂದು, ಆಪುಹುಲ್ಲುಗಾವಲಲ್ಲಿ ಮೇಯುತ್ತಿದ್ದವು. 3ಅವಲಕ್ಷಣವಾದ ಬೇರೆ ಏಳು ಬಡಹಸುಗಳು ಅವುಗಳ ಹಿಂದೆ ನದಿಯೊಳಗಿಂದ ಏರಿಬಂದು, ಆ ಹಸುಗಳ ಹತ್ತಿರ ನೈಲ್ ನದಿ ತೀರದಲ್ಲಿ ನಿಂತಿದ್ದವು. 4ಆ ಅವಲಕ್ಷಣವಾದ ಬಡಹಸುಗಳು, ಕೊಬ್ಬಿದ ಮತ್ತು ಲಕ್ಷಣವಾದ ಏಳು ಹಸುಗಳನ್ನು ತಿಂದುಬಿಟ್ಟವು. ಆಗ ಫರೋಹನು ಎಚ್ಚೆತ್ತನು.
5ಅವನು ತಿರುಗಿ ನಿದ್ರೆ ಮಾಡಿದಾಗ, ಎರಡನೆಯ ಸಾರಿ ಕನಸನ್ನು ಕಂಡನು. ಒಂದೇ ದಂಟಿನಲ್ಲಿ ಏಳು ಒಳ್ಳೆಯ ಪುಷ್ಟಿಯಾದ ತೆನೆಗಳು ಎದ್ದವು. 6ಅವುಗಳ ಹಿಂದೆಯೇ ಪೂರ್ವದಿಕ್ಕಿನ ಗಾಳಿಯಿಂದ ಬತ್ತಿ, ಒಣಗಿ ಹೋದ ಏಳು ತೆನೆಗಳು ಮೊಳೆತವು. 7ಆ ಬತ್ತಿ ಹೋಗಿದ್ದ ತೆನೆಗಳು, ಪುಷ್ಟಿಯಾದ ಏಳು ತೆನೆಗಳನ್ನು ನುಂಗಿ ಬಿಟ್ಟವು. ಫರೋಹನು ಎಚ್ಚೆತ್ತಾಗ ಅದು ಕನಸಾಗಿತ್ತು.
8ಬೆಳಿಗ್ಗೆ ಅವನ ಮನಸ್ಸು ಕಳವಳಗೊಂಡಿತು. ಆದ್ದರಿಂದ ಅವನು ಈಜಿಪ್ಟಿನ ಎಲ್ಲಾ ಮಂತ್ರವಾದಿಗಳನ್ನೂ ಎಲ್ಲಾ ಜ್ಞಾನಿಗಳನ್ನೂ ಕರೆಕಳುಹಿಸಿದನು. ಫರೋಹನು ಅವರಿಗೆ ತನ್ನ ಕನಸನ್ನು ತಿಳಿಸಿದಾಗ, ಅವುಗಳ ಅರ್ಥವನ್ನು ಹೇಳುವವರು ಯಾರೂ ಇರಲಿಲ್ಲ.
9ಆಗ ಪಾನದಾಯಕರ ಮುಖ್ಯಸ್ಥನು ಫರೋಹನಿಗೆ, “ಈ ಹೊತ್ತು ನನ್ನ ತಪ್ಪನ್ನು ಜ್ಞಾಪಕಮಾಡಿಕೊಳ್ಳುತ್ತೇನೆ. 10ಫರೋಹನು ತನ್ನ ಸೇವಕರ ಮೇಲೆ ಕೋಪಿಸಿಕೊಂಡಾಗ, ನನ್ನನ್ನೂ, ರೊಟ್ಟಿಗಾರರ ಮುಖ್ಯಸ್ಥನನ್ನೂ ಮೈಗಾವಲಿನ ದಳಪತಿಯ ಮನೆಯಲ್ಲಿ ಕಾವಲಲ್ಲಿ ಇಟ್ಟಿದ್ದೀರಿ. 11ನಾವು ಒಂದು ರಾತ್ರಿಯಲ್ಲಿ ಕನಸನ್ನು ಕಂಡೆವು. ಒಬ್ಬೊಬ್ಬನ ಕನಸಿಗೆ ಬೇರೆ ಬೇರೆ ಅರ್ಥವಿತ್ತು. 12ಮೈಗಾವಲಿನ ದಳಪತಿಗೆ ಸೇವಕನಾಗಿದ್ದ ಹಿಬ್ರಿಯ ಯೌವನಸ್ಥನು ಅಲ್ಲಿ ನಮ್ಮ ಸಂಗಡ ಇದ್ದನು. ಅವನಿಗೆ ನಾವು ನಮ್ಮ ಕನಸುಗಳನ್ನು ತಿಳಿಸಿದಾಗ, ಅವನು ನಮ್ಮ ನಮ್ಮ ಕನಸಿನ ಅರ್ಥವನ್ನು ಹೇಳಿದನು. 13ಅವನು ಹೇಳಿದ ಅರ್ಥದಂತೆಯೇ ನಮಗಾಯಿತು. ನಾನು ನನ್ನ ಸ್ಥಾನವನ್ನು ಪುನಃ ಪಡೆದುಕೊಂಡೆನು, ಇನ್ನೊಬ್ಬನನ್ನು ಗಲ್ಲಿಗೇರಿಸಲಾಯಿತು,” ಎಂದು ಹೇಳಿದನು.
14ಆಗ ಫರೋಹನು ಯೋಸೇಫನನ್ನು ಕರೆತರುವಂತೆ ಸೇವಕರನ್ನು ಕಳುಹಿಸಿದನು. ಅವರು ಅವನನ್ನು ತ್ವರೆಯಾಗಿ ಕಾರಾಗೃಹದಿಂದ ಹೊರಗೆ ತಂದರು. ಅವನು ಕ್ಷೌರಮಾಡಿಸಿಕೊಂಡು, ವಸ್ತ್ರಗಳನ್ನು ಬದಲಾಯಿಸಿ ಫರೋಹನ ಬಳಿಗೆ ಬಂದನು.
15ಆಗ ಫರೋಹನು ಯೋಸೇಫನಿಗೆ, “ನಾನು ಕನಸನ್ನು ಕಂಡಿದ್ದೇನೆ, ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ. ನೀನು ಕನಸನ್ನು ಗ್ರಹಿಸಿ, ಅರ್ಥವನ್ನು ಹೇಳುತ್ತೀ ಎಂದು ನಿನ್ನ ವಿಷಯವಾಗಿ ನಾನು ಕೇಳಿದ್ದೇನೆ,” ಎಂದನು.
16ಯೋಸೇಫನು ಫರೋಹನಿಗೆ ಉತ್ತರವಾಗಿ, “ಅದನ್ನು ನಾನು ಹೇಳಲಾರೆ, ಆದರೆ ದೇವರು ಫರೋಹನಿಗೆ ಮೆಚ್ಚಿಕೆಯಾದ ಉತ್ತರವನ್ನು ಕೊಡುವರು,” ಎಂದನು.
17ಅದಕ್ಕೆ ಫರೋಹನು ಯೋಸೇಫನಿಗೆ, “ನನ್ನ ಕನಸಿನಲ್ಲಿ, ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು. 18ಆಗ ಕೊಬ್ಬಿದ ಮಾಂಸವಿದ್ದ ಲಕ್ಷಣವಾದ ಏಳು ಹಸುಗಳು ನೈಲ್ ನದಿಯೊಳಗಿಂದ ಏರಿಬಂದು, ಆಪುಹುಲ್ಲುಗಾವಲಲ್ಲಿ ಮೇಯುತ್ತಿದ್ದವು. 19ಅವುಗಳ ಹಿಂದೆ ಅವಲಕ್ಷಣವಾದ ಕೊಬ್ಬಿಲ್ಲದ ಬೇರೆ ಏಳು ಬಡಹಸುಗಳು ಏರಿ ಬಂದವು. ಅಂಥ ಬಡ ಹಸುಗಳನ್ನು, ನಾನು ಈಜಿಪ್ಟ್ ದೇಶದಲ್ಲಿ ಎಲ್ಲಿಯೂ ನೋಡಿದ್ದಿಲ್ಲ. 20ಅವಲಕ್ಷಣವಾದ ಬಡಹಸುಗಳು, ಕೊಬ್ಬಿದ ಆ ಏಳು ಹಸುಗಳನ್ನು ತಿಂದುಬಿಟ್ಟವು. 21ಇವು ಅವುಗಳನ್ನು ತಿಂದ ಮೇಲೂ ಅವು ತಿಂದ ಹಾಗೆ ತೋರಲಿಲ್ಲ. ಅವು ಮೊದಲಿನಂತೆ ಬಡಕಲಾಗಿಯೇ ಇದ್ದವು. ತರುವಾಯ ನಾನು ಎಚ್ಚೆತ್ತೆನು.
22“ನನಗೆ ಇನ್ನೊಂದು ಕನಸು ಬಂತು. ನಾನು ಆ ಕನಸಿನಲ್ಲಿ, ಒಂದೇ ದಂಟಿನಲ್ಲಿ ಪುಷ್ಟಿಯುಳ್ಳ ಏಳು ತೆನೆಗಳು ಇದ್ದವು. 23ಪೂರ್ವದಿಕ್ಕಿನ ಗಾಳಿಯಿಂದ ಒಣಗಿ ಬತ್ತಿ ಹೋಗಿದ್ದ ಏಳು ತೆನೆಗಳು ಅವುಗಳ ತರುವಾಯ ಮೊಳೆತವು. 24ಆ ಒಣಗಿದ್ದ ಏಳು ತೆನೆಗಳು, ಪುಷ್ಟಿಯಾದ ಏಳು ತೆನೆಗಳನ್ನು ನುಂಗಿದವು. ನಾನು ಇದನ್ನು ಮಂತ್ರವಾದಿಗಳಿಗೆ ತಿಳಿಸಿದಾಗ, ಅದರ ಅರ್ಥವನ್ನು ನನಗೆ ಯಾರೂ ಹೇಳಲಿಲ್ಲ,” ಎಂದನು.
25ಆಗ ಯೋಸೇಫನು ಫರೋಹನಿಗೆ, “ಫರೋಹನ ಎರಡು ಕನಸುಗಳ ವಿಷಯ ಒಂದೇ, ದೇವರು ಮಾಡಲಿರುವುದನ್ನು ಫರೋಹನಿಗೆ ತಿಳಿಸಿದ್ದಾರೆ. 26ಆ ಏಳು ಒಳ್ಳೆಯ ಹಸುಗಳು ಏಳು ವರ್ಷಗಳು; ಏಳು ಒಳ್ಳೆಯ ತೆನೆಗಳೂ, ಏಳು ವರ್ಷಗಳೇ. ಇವೆರಡು ಕನಸುಗಳ ಅರ್ಥ ಒಂದೇ. 27ಅವುಗಳ ತರುವಾಯ ಏರಿ ಬಂದ ಬಡಕಲಾದ ಕೆಟ್ಟ ಏಳು ಹಸುಗಳು ಮತ್ತು ಪೂರ್ವದಿಕ್ಕಿನ ಗಾಳಿಯಿಂದ ಒಣಗಿ ಬತ್ತಿ ಹೋಗಿದ್ದ ಏಳು ತೆನೆಗಳು, ಬರಲಿರುವ ಏಳು ವರ್ಷಗಳು.
28“ನಾನು ಫರೋಹನಿಗೆ ಹೇಳಿದ ಮಾತಿನಂತೆ ದೇವರು ಮಾಡಲಿರುವುದನ್ನು ಫರೋಹನಿಗೆ ತೋರಿಸಿದ್ದಾರೆ. 29ಈಜಿಪ್ಟ್ ದೇಶದಲ್ಲೆಲ್ಲಾ ಬಹುಸಮೃದ್ಧಿಯ ಸುಭಿಕ್ಷ ವರ್ಷಗಳು ಬರುತ್ತವೆ. 30ಆದರೆ ಅವುಗಳ ಹಿಂದೆ ಏಳು ವರ್ಷಗಳ ಬರಗಾಲ ಬರುತ್ತವೆ. ಆಗ ಈಜಿಪ್ಟಿನಲ್ಲಿದ್ದ ಸುಭಿಕ್ಷವು ಮರೆಯುವಂತಾಗುವುದು. ಇದಲ್ಲದೆ ಬರಗಾಲವು ದೇಶವನ್ನು ನಾಶಮಾಡುವುದು. 31ತರುವಾಯ ಬರಗಾಲವು ಬಹಳ ಕಠಿಣವಾಗಿರುವುದರಿಂದ, ಸುಭಿಕ್ಷ ಕಾಲದ ನೆನಪು ದೇಶದಲ್ಲಿ ಇರದೆ ಹೋಗುವುದು. 32ಇದಲ್ಲದೆ ಆ ಕನಸು ಫರೋಹನಿಗೆ ಎರಡು ಸಾರಿ ಬಿದ್ದುದರಿಂದ, ಆ ಕಾರ್ಯವು ದೇವರಿಂದ ಸ್ಥಿರಪಡಿಸಲಾಗಿದೆ. ಆದ್ದರಿಂದ ದೇವರು ಅದನ್ನು ಬೇಗನೆ ನೆರವೇರಿಸುವರು.
33“ಹೀಗಿರುವುದರಿಂದ ಈಗ ಫರೋಹನು ವಿವೇಕಿಯಾದ ಬುದ್ಧಿಯುಳ್ಳ ಒಬ್ಬನನ್ನು ನೋಡಿ, ಅವನನ್ನು ಈಜಿಪ್ಟ್ ದೇಶದ ಮೇಲೆ ನೇಮಿಸಲಿ. 34ಫರೋಹನು ಅಧಿಕಾರಿಗಳನ್ನು ನೇಮಿಸಿ, ದೇಶದ ಮೇಲಿಟ್ಟು, ಸುಭಿಕ್ಷದ ಏಳು ವರ್ಷಗಳಲ್ಲಿ ಈಜಿಪ್ಟ್ ದೇಶದ ಐದರಲ್ಲಿ ಒಂದು ಭಾಗ ಬೆಳೆಯನ್ನು ಕಂದಾಯವಾಗಿ ತೆಗೆದುಕೊಳ್ಳಲಿ. 35ಅಧಿಕಾರಿಗಳು ಮುಂಬರುವ ಈ ಒಳ್ಳೆಯ ವರ್ಷಗಳ ಆಹಾರವನ್ನೆಲ್ಲಾ ಕೂಡಿಸಿ, ಫರೋಹನ ಕೈಕೆಳಗೆ ಧಾನ್ಯವನ್ನು ಪಟ್ಟಣಗಳಲ್ಲಿ ಇಟ್ಟುಕೊಂಡು ಕಾಯಲಿ. 36ಈಜಿಪ್ಟಿನಲ್ಲಿ ಬರುವದಕ್ಕಿರುವ ಬರಗಾಲದ ಏಳು ವರ್ಷಗಳಲ್ಲಿ ದೇಶವು ಹಾಳಾಗದಂತೆ, ಆಹಾರವು ದೇಶಕ್ಕೆ ಸಂಗ್ರಹವಾಗಿರುವುದು,” ಎಂದನು.
37ಈ ಮಾತುಗಳು ಫರೋಹನಿಗೂ, ಅವನ ಸೇವಕರಿಗೂ ಒಳ್ಳೆಯದೆಂದು ತೋರಿತು. 38ಫರೋಹನು ತನ್ನ ಸೇವಕರಿಗೆ, “ಯೋಸೇಫನಂಥ ದೇವರಾತ್ಮವುಳ್ಳ ಮನುಷ್ಯನು ಸಿಕ್ಕಾನೋ?” ಎಂದನು.
39ಫರೋಹನು ಯೋಸೇಫನಿಗೆ, “ದೇವರು ನಿನಗೆ ಇವುಗಳನ್ನೆಲ್ಲಾ ತೋರಿಸಿದ ಮೇಲೆ, ನಿನ್ನ ಹಾಗೆ ವಿವೇಕಿಯೂ ಬುದ್ಧಿವಂತನೂ ಯಾರೂ ಇಲ್ಲ. 40ನೀನೇ ನನ್ನ ಅರಮನೆಯ ಅಧಿಕಾರಿಯಾಗಿರಬೇಕು. ನಿನ್ನ ಮಾತಿನ ಪ್ರಕಾರ ನನ್ನ ಜನರೆಲ್ಲಾ ಅಧೀನವಾಗಿರಲಿ. ಸಿಂಹಾಸನದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು,” ಎಂದನು.
ಈಜಿಪ್ಟಿನ ಅಧಿಕಾರಿಯಾದ ಯೋಸೇಫನು
41ಇದಲ್ಲದೆ ಫರೋಹನು ಯೋಸೇಫನಿಗೆ, “ನೋಡು, ನಾನು ನಿನ್ನನ್ನು ಈಜಿಪ್ಟ್ ದೇಶದ ಮೇಲೆಲ್ಲಾ ನೇಮಿಸಿದ್ದೇನೆ,” ಎಂದನು. 42ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು, ನಾರುಮಡಿಯ ವಸ್ತ್ರವನ್ನು ತೊಡಿಸಿ, ಚಿನ್ನದ ಸರಪಣಿಯನ್ನು ಅವನ ಕೊರಳಿಗೆ ಹಾಕಿದನು. 43ತನಗಿದ್ದ ಎರಡನೆಯ ರಥದಲ್ಲಿ ಅವನನ್ನು ಕೂಡಿಸಿದಾಗ, “ಈತನನ್ನು ನಮಸ್ಕರಿಸಿ ದಾರಿಮಾಡಿರಿ,” ಎಂದು ಪ್ರಕಟಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶವನ್ನೆಲ್ಲಾ ಆಳುವವನನ್ನಾಗಿ ನೇಮಿಸಿದನು.
44ಇದಲ್ಲದೆ ಫರೋಹನು ಯೋಸೇಫನಿಗೆ, “ನಾನು ಫರೋಹನು, ನಿನ್ನ ಅಪ್ಪಣೆಯಿಲ್ಲದೆ ಈಜಿಪ್ಟ್ ದೇಶದಲ್ಲೆಲ್ಲಾ ಯಾವನೂ ತನ್ನ ಕೈಯನ್ನಾಗಲಿ, ಕಾಲನ್ನಾಗಲಿ ಎತ್ತಬಾರದು,” ಎಂದನು. 45ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ತರುವಾಯ ಯೋಸೇಫನು ಈಜಿಪ್ಟ್ ದೇಶದಲ್ಲೆಲ್ಲಾ ಸಂಚರಿಸಿದನು.
46ಯೋಸೇಫನು ಈಜಿಪ್ಟಿನ ಅರಸನಾದ ಫರೋಹನ ಮುಂದೆ ನಿಂತಾಗ, ಮೂವತ್ತು ವರ್ಷದವನಾಗಿದ್ದನು. ತರುವಾಯ ಯೋಸೇಫನು ಫರೋಹನ ಸನ್ನಿಧಿಯಿಂದ ಹೊರಟು, ಈಜಿಪ್ಟ್ ದೇಶದಲ್ಲೆಲ್ಲಾ ಸಂಚಾರಮಾಡಿದನು. 47ಆ ದೇಶವು ಸುಭಿಕ್ಷದ ಏಳು ವರ್ಷಗಳಲ್ಲಿ ರಾಶಿರಾಶಿಯಾಗಿ ಫಲಕೊಟ್ಟಿತು. 48ಹೀಗಿರಲಾಗಿ ಅವನು ಈಜಿಪ್ಟ್ ದೇಶದಲ್ಲಿದ್ದ ಆ ಏಳು ವರ್ಷಗಳ ಆಹಾರವನ್ನೆಲ್ಲಾ ಕೂಡಿಸಿ, ಪಟ್ಟಣಗಳಲ್ಲಿ ಇಟ್ಟನು. ಒಂದೊಂದು ಪಟ್ಟಣದ ಸುತ್ತಲಿರುವ ಬೆಳೆಯನ್ನು ಆಯಾ ಪಟ್ಟಣದಲ್ಲಿ ಕೂಡಿಸಿಟ್ಟನು. 49ಈ ಮೇರೆಗೆ ಯೋಸೇಫನು ದವಸ ಧಾನ್ಯವನ್ನು ಸಮುದ್ರದ ಮರಳಿನಷ್ಟು ರಾಶಿರಾಶಿಯಾಗಿ ಕೂಡಿಸಿ ಲೆಕ್ಕಮಾಡುವುದನ್ನು ಬಿಟ್ಟುಬಿಟ್ಟನು. ಅದನ್ನು ಲೆಕ್ಕಮಾಡುವುದಕ್ಕೆ ಆಗದೆ ಹೋಯಿತು.
50ಇದಲ್ಲದೆ ಬರಗಾಲದ ವರ್ಷಗಳು ಬರುವುದಕ್ಕೆ ಮುಂಚೆ, ಯೋಸೇಫನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್, ಅವಳನ್ನು ಯೋಸೇಫನಿಗೆ ಹೆತ್ತಳು. 51ಜೇಷ್ಠಪುತ್ರನಿಗೆ ಯೋಸೇಫನು ಮನಸ್ಸೆ#41:51 ಮನಸ್ಸೆ ಹೀಬ್ರೂ ಭಾಷೆಯಲ್ಲಿ ಮರೆತುಬಿಡು ಎಂದು ಹೆಸರಿಟ್ಟನು. ಏಕೆಂದರೆ ಅವನು, “ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನು ಮರೆತುಬಿಡುವಂತೆ ಮಾಡಿದರು,” ಎಂದನು. 52ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯೀಮ್#41:52 ಎಫ್ರಾಯೀಮ್ ಹೀಬ್ರೂ ಭಾಷೆಯಲ್ಲಿ ಫಲಭರಿತ ಎಂದು ಹೆಸರಿಟ್ಟನು. “ನಾನು ಬಾಧೆಯನ್ನನುಭವಿಸಿದ ದೇಶ ಫಲಭರಿತವಾಗುವಂತೆ ದೇವರು ಮಾಡಿದ್ದಾರೆ,” ಎಂದನು.
53ಈಜಿಪ್ಟ್ ದೇಶದಲ್ಲಿದ್ದ ಸುಭಿಕ್ಷದ ಏಳು ವರ್ಷಗಳು ಮುಗಿದ ತರುವಾಯ, 54ಯೋಸೇಫನು ಹೇಳಿದಂತೆ ಬರುವುದಕ್ಕಿದ್ದ ಬರಗಾಲದ ಏಳು ವರ್ಷಗಳು ಆರಂಭವಾದವು. ಆಗ ಎಲ್ಲಾ ದೇಶಗಳಲ್ಲಿ ಬರಗಾಲವಿತ್ತು. ಆದರೆ ಈಜಿಪ್ಟ್ ದೇಶದಲ್ಲೆಲ್ಲಾ ಆಹಾರವಿತ್ತು. 55ಈಜಿಪ್ಟ್ದವರೆಲ್ಲಾ ಹಸಿದು, ಜನರು ಆಹಾರಕ್ಕಾಗಿ ಫರೋಹನ ಬಳಿಗೆ ಹೋಗಿ ಕೂಗಿಕೊಂಡಾಗ, ಫರೋಹನು ಎಲ್ಲಾ ಈಜಿಪ್ಟಿನವರಿಗೆ, “ಯೋಸೇಫನ ಬಳಿಗೆ ಹೋಗಿರಿ, ಅವನು ನಿಮಗೆ ಹೇಳುವುದನ್ನು ಮಾಡಿರಿ,” ಎಂದನು.
56ಈಜಿಪ್ಟಿನಲ್ಲೆಲ್ಲಾ ಬರವಿತ್ತು. ಯೋಸೇಫನು ಧಾನ್ಯವಿದ್ದ ಕಣಜಗಳನ್ನೆಲ್ಲಾ ತೆರೆದು ಈಜಿಪ್ಟಿನವರಿಗೆ ಮಾರಿದನು. ಆಗ ಬರವು ಈಜಿಪ್ಟ್ ದೇಶದಲ್ಲಿ ಕಠಿಣವಾಗಿತ್ತು. 57ಇದಲ್ಲದೆ ಭೂಮಿಯ ಮೇಲೆಲ್ಲಾ ಬರಗಾಲವು ಕಠಿಣವಾಗಿದ್ದದರಿಂದ, ಎಲ್ಲಾ ದೇಶದವರು ಯೋಸೇಫನಿಂದ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಈಜಿಪ್ಟಿಗೆ ಬರುತ್ತಿದ್ದರು.
Currently Selected:
ಆದಿಕಾಂಡ 41: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.