YouVersion Logo
Search Icon

ಮಾರ್ಕ 4

4
ದೇವರ ರಾಜ್ಯವನ್ನು ಕುರಿತ ಸಾಮ್ಯಗಳು
(ಮತ್ತಾ. 13.1-34; ಲೂಕ. 8.4-18, 13.18, 19)
1ಆತನು ತಿರಿಗಿ ಸಮುದ್ರದ ದಡದಲ್ಲಿ ಉಪದೇಶ ಮಾಡುತ್ತಿದ್ದನು. ಬಹುಜನರು ಆತನ ಬಳಿಗೆ ಕೂಡಿ ಬಂದದ್ದರಿಂದ ಆತನು ಸಮುದ್ರದಲ್ಲಿದ್ದ ದೋಣಿಹತ್ತಿ ಕೂತುಕೊಂಡನು; 2ಆ ಜನರೆಲ್ಲರು ಸಮುದ್ರದ ಹತ್ತರ ನೆಲದ ಮೇಲೆ ಇದ್ದರು. ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಉಪದೇಶ ಮಾಡಿದನು. ಆ ಉಪದೇಶದಲ್ಲಿ ಅವರಿಗೆ ಹೇಳಿದ್ದೇನಂದರೆ -
3ಕೇಳಿರಿ! ಬಿತ್ತುವವನು ಬಿತ್ತುವದಕ್ಕೆ ಹೊರಟನು. 4ಬಿತ್ತುವಾಗ ಕೆಲವು ಬೀಜ ದಾರಿಯ ಮಗ್ಗುಲಲ್ಲಿ ಬಿದ್ದವು; ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. 5ಬೇರೆ ಕೆಲವು ಬೀಜ ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು; ಅಲ್ಲಿ ಮಣ್ಣು ತೆಳ್ಳಗಿದ್ದದರಿಂದ ಅವು ಬೇಗ ಮೊಳೆತವು; 6ಆದರೆ ಬಿಸಿಲೇರಿದಾಗ ಬಾಡಿ ಬೇರಿಲ್ಲದಕಾರಣ ಒಣಗಿಹೋದವು. 7ಮತ್ತೆ ಕೆಲವು ಬೀಜ ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ. 8ಇನ್ನು ಕೆಲವು ಬೀಜ ಒಳ್ಳೆಯ ನೆಲದಲ್ಲಿ ಬಿದ್ದು ಹುಟ್ಟಿ ಬೆಳೆಯುತ್ತಾ ಬಂದು ಒಂದು ಮೂವತ್ತರಷ್ಟು, ಒಂದು ಅರುವತ್ತರಷ್ಟು, 9ಒಂದು ನೂರರಷ್ಟು ಫಲವನ್ನು ಕೊಟ್ಟವು ಎಂದು ಹೇಳಿ - ಕೇಳುವದಕ್ಕೆ ಕಿವಿಯುಳ್ಳವನು ಕೇಳಲಿ ಅಂದನು.
10ಆತನು ಒಬ್ಬನೇ ಇದ್ದಾಗ ಆತನ ಹತ್ತಿರ ಇದ್ದವರು ಹನ್ನೆರಡು ಮಂದಿ ಶಿಷ್ಯರ ಕೂಡ ಆ ಸಾಮ್ಯಗಳ ವಿಷಯದಲ್ಲಿ ಆತನನ್ನು ಕೇಳಿದರು. 11ಆತನು ಅವರಿಗೆ - ದೇವರ ರಾಜ್ಯದ ಗುಟ್ಟು ನಿಮಗೇ ಕೊಟ್ಟಿದೆ; ಹೊರಗಿನವರಿಗೆ ಎಲ್ಲವೂ ಸಾಮ್ಯದ ಮರೆಯಲ್ಲಿವೆ.
12ಅವರು ಕಣ್ಣಿದ್ದು ನೋಡಿದರೂ ಕಾಣಬಾರದು,
ಕಿವಿಯಿದ್ದು ಕೇಳಿದರೂ ತಿಳುಕೊಳ್ಳಬಾರದು,
ಹಾಗೆ ಕಂಡು ತಿಳುಕೊಂಡರೆ ಅವರು ದೇವರ ಕಡೆಗೆ ತಿರುಗಿಕೊಂಡು ಪಾಪಕ್ಷಮೆಯನ್ನು ಹೊಂದಾರು
ಎಂದೇ ಮರೆಮಾಡಲಾಗಿದೆ. 13ಆಮೇಲೆ ಆತನು ಅವರಿಗೆ ಹೇಳಿದ್ದೇನಂದರೆ - ಈ ಸಾಮ್ಯದ ಅರ್ಥ ನಿಮಗೆ ಗೊತ್ತಾಗಲಿಲ್ಲವೋ? ಹಾಗಾದರೆ ನನ್ನ ಎಲ್ಲಾ ಸಾಮ್ಯಗಳನ್ನು ಹೇಗೆ ತಿಳುಕೊಂಡೀರಿ? 14ಆ ಬಿತ್ತುವವನು ವಾಕ್ಯವೆಂಬ ಬೀಜವನ್ನು ಬಿತ್ತುತ್ತಾನೆ. 15ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ವಾಕ್ಯವನ್ನು ತೆಗೆದುಬಿಡುತ್ತಾನೆ. ಇವರೇ ವಾಕ್ಯವು ಬಿತ್ತಲ್ಪಟ್ಟ ದಾರಿಯ ಮಗ್ಗುಲಾಗಿರುವವರು. 16-17ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ; ತಮಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು ಬಳಿಕ ಆ ವಾಕ್ಯದ ನಿವಿುತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬೀಜಬಿದ್ದ ಬಂಡೆಯ ನೆಲವಾಗಿರುವವರು. 18-19ಇನ್ನು ಕೆಲವರು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಗಳೂ ಐಶ್ವರ್ಯದಿಂದುಂಟಾಗುವ ಮೋಸವೂ ಇತರ ವಿಷಯಗಳ ಮೇಲಣ ಆಶೆಗಳೂ ಒಳಗೆ ಸೇರಿ ಆ ವಾಕ್ಯವನ್ನು ಅಡಗಿಸಿಬಿಡುವದರಿಂದ ಫಲವನ್ನು ಕೊಡದೆ ಇರುತ್ತಾರೆ; ಇವರೇ ಮುಳ್ಳುಗಿಡಗಳಲ್ಲಿ ಬೀಜಬಿದ್ದ ನೆಲವಾಗಿರುವವರು. 20ಮತ್ತೆ ಕೆಲವರು ವಾಕ್ಯವನ್ನು ಕೇಳಿ ಕೈಕೊಂಡು ಮೂವತ್ತರಷ್ಟಾಗಲಿ ಅರುವತ್ತರಷ್ಟಾಗಲಿ ನೂರರಷ್ಟಾಗಲಿ ಫಲವನ್ನು ಕೊಡುತ್ತಾರೆ; ಇವರೇ ಬೀಜಬಿದ್ದ ಒಳ್ಳೆಯ ನೆಲವಾಗಿರುವವರು ಅಂದನು.
21ಇದಲ್ಲದೆ ಆತನು ಅವರಿಗೆ - ದೀಪವನ್ನು ತಂದು ಕೊಳಗದೊಳಗಾಗಲಿ ಮಂಚದ ಕೆಳಗಾಗಲಿ ಇಡುವದುಂಟೇ? ದೀಪಸ್ತಂಭದ ಮೇಲೆ ಇಡುತ್ತಾರಲ್ಲಾ? 22ಯಾವದಾಗಲಿ ಪ್ರಕಾಶಕ್ಕೆ ಬರಬೇಕೇ ಹೊರತು ರಹಸ್ಯವಾಗಿರುವದಿಲ್ಲ; ಯಾವದಾಗಲಿ ಬೈಲಿಗೆ ಬರಬೇಕೇ ಹೊರತು ಗುಟ್ಟಾಗಿರುವದಿಲ್ಲ. 23ಕೇಳುವದಕ್ಕೆ ಕಿವಿಯುಳ್ಳವನು ಕೇಳಲಿ ಎಂದು ಹೇಳಿದನು. 24ಮತ್ತು ಆತನು ಅವರಿಗೆ - ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆ. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು; ಇನ್ನೂ ಕೂಡಿಸಿ ಕೊಡುವರು. 25ಇದ್ದವನಿಗೆ ಕೊಡಲ್ಪಡುವದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು ಎಂದು ಹೇಳಿದನು.
26ಇನ್ನೂ ಆತನು ಅವರಿಗೆ ಹೇಳಿದ್ದು - ಒಬ್ಬನು ಭೂವಿುಯಲ್ಲಿ ಬೀಜವನ್ನು ಹಾಕಿ ರಾತ್ರಿ ಮಲಗುತ್ತಾ ಹಗಲು ಎದ್ದಿರುತ್ತಾ ಇರಲು 27ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವದು. ಇದರಂತೆ ದೇವರ ರಾಜ್ಯ. 28ಭೂವಿುಯು ಮೊದಲು ಗರಿಯನ್ನೂ, ಆಮೇಲೆ ಹೊಡೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ. 29ಆದರೆ ಫಲಮಾಗಿದ ಕೂಡಲೆ ಅವನು ಸುಗ್ಗಿ ಕಾಲ ಬಂತೆಂದು ಕೊಯಿಸುತ್ತಾನೆ ಅಂದನು.
30ಇನ್ನೂ ಆತನು ಹೇಳಿದ್ದು - ದೇವರ ರಾಜ್ಯವನ್ನು ಯಾವದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ? 31ಅದು ಸಾಸಿವೆ ಕಾಳಿನಂತಿರುತ್ತದೆ. ಭೂವಿುಯಲ್ಲಿ ಬಿತ್ತುವಾಗ ಅದು ಭೂವಿುಯಲ್ಲಿರುವ ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. 32ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡ ದೊಡ್ಡ ಕೊಂಬೆಗಳನ್ನು ಬಿಡುವದರಿಂದ ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅದರ ನೆರಳಿನಲ್ಲಿ ವಾಸಮಾಡುವದಕ್ಕಾಗುತ್ತದೆ ಅಂದನು.
33ಆತನು ಈ ತರದ ಅನೇಕ ಸಾಮ್ಯಗಳಿಂದ ಜನರ ಗ್ರಹಿಕೆಗೆ ತಕ್ಕ ಹಾಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು. ಸಾಮ್ಯವಿಲ್ಲದೆ ಅವರಿಗೆ ಹೇಳಲಿಲ್ಲ. 34ಆದರೆ ಪ್ರತ್ಯೇಕವಾಗಿ ಆತನು ತನ್ನ ಆಪ್ತಶಿಷ್ಯರಿಗೆ ಎಲ್ಲವನ್ನು ಬಿಚ್ಚಿ ಹೇಳಿದನು.
ಯೇಸು ಸಮುದ್ರದ ಮೇಲಣ ಬಿರುಗಾಳಿಯನ್ನು ನಿಲ್ಲಿಸಿದ್ದು
(ಮತ್ತಾ. 8.23-27; ಲೂಕ. 8.22-25)
35ಆ ಹೊತ್ತು ಸಾಯಂಕಾಲವಾದಾಗ ಆತನು ಅವರಿಗೆ - ಆಚೇದಡಕ್ಕೆ ಹೋಗೋಣ ಎಂದು ಹೇಳಲು 36ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರಕೊಂಡುಹೋದರು. 37ಬೇರೆ ದೋಣಿಗಳೂ ಆತನ ಸಂಗಡ ಇದ್ದವು. ತರುವಾಯ ದೊಡ್ಡ ಬಿರುಗಾಳಿ ಎದ್ದು ತೆರೆಗಳು ಆ ದೋಣಿಗೆ ಬಡಿದು ಒಳಗೆ ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವದಕ್ಕೆ ಬಂದಿತ್ತು. 38ಆತನು ದೋಣಿಯ ಹಿಂಭಾಗದಲ್ಲಿ ತಲೆಗಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದನು. ಅವರು ಆತನನ್ನು ಎಬ್ಬಿಸಿ - ಗುರುವೇ, ನಾವು ಮುಳುಗಿಹೋಗುವದರಲ್ಲಿ ನಿನಗೆ ಚಿಂತೆಯಿಲ್ಲವೇ ಎಂದು ಕೇಳಲು 39ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ - ಸುಮ್ಮನಿರು, ಮೊರೆಯಬೇಡ ಎಂದು ಅಪ್ಪಣೆಕೊಟ್ಟನು. ಕೊಡುತ್ತಲೆ ಗಾಳಿ ನಿಂತು ಹೋಗಿ ಎಲ್ಲಾ ಶಾಂತವಾಯಿತು. 40ತರುವಾಯ ಆತನು ಅವರನ್ನು - ಯಾಕೆ ಧೈರ್ಯಗೆಡುತ್ತೀರಿ? ಇನ್ನೂ ನಿಮಗೆ ನಂಬಿಕೆಯಿಲ್ಲವೇ ಎಂದು ಕೇಳಲು ಅವರು ಬಹು ಭಯಪಟ್ಟು - 41ಈತನು ಯಾರಿರಬಹುದು? ಗಾಳಿಯೂ ಸಮುದ್ರವೂ ಸಹ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡರು.

Currently Selected:

ಮಾರ್ಕ 4: KANJV-BSI

Highlight

Share

Copy

None

Want to have your highlights saved across all your devices? Sign up or sign in