ಮತ್ತಾಯ 28
28
ಯೇಸುವಿನ ಪುನರುತ್ಥಾನವು
(ಮಾರ್ಕ. 16.1-10; ಲೂಕ. 24.1-10; ಯೋಹಾ. 20.1-18)
1ಸಬ್ಬತ್ದಿನ ಆದ ಮೇಲೆ ವಾರದ ಮೊದಲನೆಯ ದಿವಸ ಬೆಳಗಾಗುವಾಗ#28.1 ಅಥವಾ ; ಪ್ರಾರಂಭವಾಗುವದಕ್ಕೆ ಸ್ವಲ್ಪ ಹೊತ್ತು ಮಾತ್ರ ಇದ್ದಾಗ. ಮಗ್ದಲದ ಮರಿಯಳೂ ಆ ಬೇರೆ ಮರಿಯಳೂ ಸಮಾಧಿಯನ್ನು ನೋಡುವದಕ್ಕೆ ಬಂದರು. 2ಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕೂತುಕೊಂಡನು. 3ಅವನ ಮುಖಭಾವವು ವಿುಂಚಿನಂತೆ ಇತ್ತು, ಅವನ ಉಡುಪು ಹಿಮದಂತೆ ಬೆಳ್ಳಗಿತ್ತು; 4ಕಾವಲುಗಾರರು ಅವನಿಗೆ ಹೆದರಿ ನಡುಗಿ ಸತ್ತವರ ಹಾಗಾದರು. 5ಆಗ ದೂತನು ಆ ಹೆಂಗಸರಿಗೆ - ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ಹುಡುಕುತ್ತೀರೆಂದು ಬಲ್ಲೆನು; ಆತನು ಇಲ್ಲಿ ಇಲ್ಲ; 6ತಾನು ಹೇಳಿದಂತೆ ಎದ್ದಿದ್ದಾನೆ; ಬನ್ನಿ, ಆತನು#28.6 ಕೆಲವು ಪ್ರತಿಗಳಲ್ಲಿ - ಕರ್ತನು ಎಂದು ಬರೆದದೆ. ಮಲಗಿದ್ದ ಸ್ಥಳವನ್ನು ನೋಡಿರಿ; 7ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ - ಸತ್ತವನು ಬದುಕಿದ್ದಾನೆ, ಆತನು ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ; ನಾನು ನಿಮಗೆ ಹೇಳಿದ್ದೇನೆ, ನೋಡಿರಿ ಎಂದು ಹೇಳಿದನು. 8ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ತಿಳಿಸುವದಕ್ಕೆ ಓಡಿಹೋದರು. 9ಆಗ ಯೇಸು ಅವರ ಎದುರಿಗೆ ಬಂದು - ನಿಮಗೆ ಶುಭವಾಗಲಿ ಅಂದನು. ಅವರು ಹತ್ತರಕ್ಕೆ ಬಂದು ಆತನ ಪಾದಗಳನ್ನು ಹಿಡಿದು ಆತನಿಗೆ ನಮಸ್ಕಾರಮಾಡಿದರು. 10ಯೇಸು ಅವರಿಗೆ - ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ನನ್ನನ್ನು ನೋಡುವರು ಎಂದು ಹೇಳಿದನು.
11ಅವರು ಹೋಗುತ್ತಿರುವಾಗ ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮಹಾಯಾಜಕರಿಗೆ ತಿಳಿಸಿದರು. 12ಇವರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು - 13ಅವನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿರುವಾಗ ಅವನನ್ನು ಕದ್ದುಕೊಂಡು ಹೋದರು ಎಂದು ಹೇಳಿರಿ; 14ಈ ಸುದ್ದಿ ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ಭಯವಿಲ್ಲದ ಹಾಗೆ ಮಾಡುತ್ತೇವೆ ಅಂದರು. 15ಇವರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿ ಅದೆ.
ಯೇಸುವಿನ ಕಡೆಯ ಮಾತುಗಳು
16ಬಳಿಕ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ ಯೇಸು ತಮಗೆ ಗೊತ್ತು ಮಾಡಿದ್ದ ಬೆಟ್ಟಕ್ಕೆ ಸೇರಿದರು. 17ಅಲ್ಲಿ ಆತನನ್ನು ಕಂಡು ಆತನಿಗೆ ಅಡ್ಡಬಿದ್ದರು; ಆದರೆ ಕೆಲವರು ಸಂದೇಹಪಟ್ಟರು. 18ಆಗ ಯೇಸು ಹತ್ತರಕ್ಕೆ ಬಂದು - ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. 19ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ 20ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು.
Currently Selected:
ಮತ್ತಾಯ 28: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.